Pages

Saturday 14 January 2012

ಸುವರ್ಣಾಳ ಮರ್ಯಾದೆ ಹತ್ಯೆ ಪ್ರಕರಣ : ಒಕ್ಕಲಿಗ ಗರ್ಲ್ ಲವ್ಸ್ ಮಾದಿಗ ಬಾಯ್!

Udayavani | Jan 10, 2012
ಮಂಡ್ಯ: ಮದ್ದೂರು ತಾಲೂಕು ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಕುಟುಂಬ ರಕ್ಷಣೆಗಾಗಿ ಪೊಲೀಸರಲ್ಲಿ ಮೊರೆ ಇಟ್ಟಿದೆ.

ನವೆಂಬರ್‌ 6ರಂದು ಸುವರ್ಣಾಳನ್ನು ಆಕೆಯ ತಂದೆಯೇ ಹತ್ಯೆಗೈದ ನಂತರ ಆಕೆಯನ್ನು ಪ್ರೀತಿಸುತ್ತಿದ್ದ ಗೋವಿಂದರಾಜು ನಾಪತ್ತೆಯಾಗಿದ್ದಾನೆ. ಸುವರ್ಣಾಳ ತಂದೆ ದವಲನ ರಾಮಕೃಷ್ಣ ಜೀವಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗೋವಿಂದರಾಜು ಕುಟುಂಬ ಊರನ್ನು ಖಾಲಿ ಮಾಡಿದ್ದರು. ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕುಟುಂಬ ಮಂಗಳವಾರ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಅವರನ್ನು ಭೇಟಿ ಮಾಡಿ ದವಲನ ರಾಮಕೃಷ್ಣರಿಂದ ನಮಗೆ ಜೀವ ಬೆದರಿಕೆಯಿದ್ದು ನಮಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಗೋವಿಂದರಾಜು ತಾಯಿ ತುಳಸಮ್ಮ, ಆತನ ಅಣ್ಣಂದಿರಾದ ತಿಮ್ಮೇಶ, ತಿಮ್ಮಪ್ಪ, ಅತ್ತಿಗೆಯರಾದ ಮಂಗಳಮ್ಮ, ಚಿಕ್ಕತಾಯಮ್ಮ ಎಎಸ್ಪಿ$ ರಾಜಣ ಅವರನ್ನು ಭೇಟಿಯಾಗಿ ಅಂದು ನಡೆದ ಘಟನೆಯನ್ನೆಲ್ಲಾ ಸವಿವರವಾಗಿ ವಿವರಿಸಿದ್ದಾರೆ.

ಸುವರ್ಣಾ ದಲಿತ ಹುಡುಗ ಗೋವಿಂದರಾಜುನನ್ನು ಪ್ರೀತಿಸಿದಳೆಂಬ ಒಂದೇ ಕಾರಣಕ್ಕೆ ಆಕೆಯ ತಂದೆ ಗೋವಿಂದರಾಜು ಮತ್ತು ಸಹೋದರರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಆಕೆಯನ್ನು ನಮ್ಮ ಮನೆಗೆ ಕರೆತಂದು ಮರದ ತೊಲೆಗೆ ನೇಣುಹಾಕಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ ನಮಗೂ ಜೀವಬೆದರಿಕೆ ಹಾಕಿದ್ದಾರೆ. ನಿಮ್ಮ ಹುಡುಗನನ್ನು ನಮಗೆ ತಂದೊಪ್ಪಿಸುವಂತೆ ಪೀಡಿಸುತ್ತಿದ್ದಾರಲ್ಲದೆ, ಅವನನ್ನೂ ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾರೆ. ಈ ಕಾರಣದಿಂದಲೇ ನಾವು ಊರನ್ನು ತೊರೆದಿದ್ದು, ನಿತ್ಯ ಭಯದ ನಡುವೆಯೇ ಬದುಕು ಸಾಗಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಭಯದಿಂದಲೇ ಗೋವಿಂದರಾಜು ಕೂಡ ಊರು ತೊರೆದಿದ್ದಾನೆ. ಆತ ಎಲ್ಲಿದ್ದಾನೆಂಬುದು ನಮಗೆ ತಿಳಿಯದಾಗಿದೆ. ಊರಿಗೆ ಹೋಗಲು ನಮಗೆ ಭಯವಾಗುತ್ತಿದೆ. ಆದ ಕಾರಣ ಪೊಲೀಸರು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ಸುವರ್ಣಾ ಹತ್ಯೆಯಾದ ದಿನ ನಾಪತ್ತೆಯಾಗಿದ್ದ ಕುಟುಂಬ ಸದಸ್ಯರು ಜೀವಭಯದಿಂದ ಪೊಲೀಸರೆದುರು ಆಗಮಿಸಿ ಇದೇ ಮೊದಲ ಬಾರಿಗೆ ರಕ್ಷಣೆ ಕೋರಿದ್ದಾರೆ. ಕುಟುಂಬದವರಿಗೆ ರಕ್ಷಣೆ ನೀಡುವುದಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.

No comments:

Post a Comment

html