Pages

Thursday 5 January 2012

Honour Killing: Vokkaliga Girl Loves Dalit Boy


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ 
ಶುಕ್ರವಾರ  
ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.

-VB News

No comments:

Post a Comment

html