Pages

Sunday 10 April 2011

ಗಾಂಧಿ, ಅಸ್ಪಶತೆ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಸಂಕಟಗಳು (ಭಾಗ-1)


ಗುರುವಾರ - ಜನವರಿ -20-2011

"I am condemned because I criticized Gandhi and Jinnah for the mess they have made of Indian politics, and in doing so I am alleged to have shown towards them hatred and disrespect. In reply to this charge what I have to say is that I have been a critic and I must continue to be such ….. I dislike them I do not hate them – it is because I love India more." 

ಈ ಹೇಳಿಕೆಯನ್ನು ಅಂಬೇಡ್ಕರ್ ಬಿಡು ಗಡೆ ಮಾಡಿರುವುದು 1942ರಲ್ಲಿ. ರಾಷ್ಟ್ರ ರಾಜ ಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಗಾಂಧೀಜಿ ಮತ್ತು ಅವರು ಈ ದೇಶದ ಅಸ್ಪಶ್ಯ ಮತ್ತು ದುರ್ಬಲ ವರ್ಗದವರನ್ನು ಉದ್ದೇಶಿಸಿ ನಡೆಸುತ್ತಿರುವ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಬೇಡ್ಕರ್, ಆ ಕುರಿತು ತನ್ನ ನಿಲುವೇನು ಎಂಬುದನ್ನು ಮೇಲಿನ ಹೇಳಿಕೆಯಲ್ಲಿ ಬಹಿರಂಗಪಡಿಸುತ್ತಾರೆ. ಇದು ಈ ದೇಶದ ಮಿಲಿ ಯಗಟ್ಟಳೆ ಅಸ್ಪಶ್ಯರು ಹಾಗೂ ಜಾತಿ ವಿರೋಧಿ ಹೋರಾಟವನ್ನು ಬೆಂಬಲಿಸುವವರ ನಿಲುವು ಎಂದು ದೃಢೀಕರಿಸುತ್ತಾರೆ. ಜೊತೆಗೆ ಅವರ ಹೇಳಿಕೆಯಲ್ಲಿ ಗಾಂಧಿ ಮತ್ತು ಅಸ್ಪಶತೆ ನಡು ವಿನ ಸಂಬಂಧವು ಕೂಡ ವ್ಯಕ್ತವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ಗಾಂಧೀ ರಾಜಕೀಯದ ವಿಚಾರವಾಗಿ ಪ್ರಕಟವಾಗುವ ದ್ವಂದ್ವಗಳ ಕುರಿತು ಅಂಬೇಡ್ಕರ್‌ರವರಿಗೆ ವೈ ಮನಸ್ಸು ಇದ್ದಿರುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ತಳೆದಿರುವ ನಿಲುವಿನಲ್ಲೆ ಈ ದ್ವಂದ್ವ ಬಹಿರಂಗಗೊಳ್ಳುತ್ತದೆ -ಒಂದು ಕಡೆ ಅವರು ಅಸ್ಪಶತೆ ಆಚರಣೆಯ ಕುರಿತು ತೀವ್ರವಾದ ಟೀಕೆಗಳನ್ನು ಮಾಡುತ್ತಾರೆ. ಇನ್ನೊಂದು ಕಡೆ ಯಲ್ಲಿ ಜಾತಿ ಮತ್ತು ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುತ್ತಾರೆ. ಇಲ್ಲಿ ಎರಡು ಪ್ರಮುಖ ವಿಷಯಗಳು ಪರಸ್ಪರ ಸಂಬಂಧ ಬೆಳೆಸಿಕೊಳ್ಳುತ್ತವೆ.
ಒಂದನೆಯದು ಜಾತಿ ಎಂಬ ಸಂಸ್ಥೆ ಅಥವಾ ವರ್ಣಾಶ್ರಮ ಧರ್ಮದ ಕುರಿತು ಗಾಂಧೀಜಿಗಿರುವ ಕಾಳಜಿ. ಎರಡನೆಯದು ಕಾಂಗ್ರೆಸ್‌ನೊಳಗೆ ಗುರುತಿಸಿಕೊಂಡ ಒಂದು ಬಲಿಷ್ಠ ಗುಂಪು ತನ್ನ ಇರುವಿಕೆಯನ್ನು ಪ್ರಕಟಿ ಸುತ್ತಾ ವಸಾಹತುಶಾಹಿ ವಿರೋಧಿ ಚಳವಳಿ ಯನ್ನು ಮುನ್ನಡೆಸುವ ನೆಪದಲ್ಲಿ ಜಾತಿ ವ್ಯವಸ್ಥೆ ಯನ್ನು ಪ್ರತಿಪಾದಿಸುತ್ತದೆ. ಈ ಗುಂಪನ್ನು ಬಾಲಗಂಗಾಧರ್ ತಿಲಕ್‌ರವರು ಪ್ರತಿನಿಧಿಸು ತ್ತಿದ್ದು, ಅವರಿಗೆ ಜಾತಿ ವ್ಯವಸ್ಥೆ ಎಂಬುದು ಧರ್ಮದೊಳಗಿನ ಒಂದು ಒಕ್ಕೂಟವಾಗಿ ಕಾಣು ತ್ತದೆ.
ತಿಲಕ್ ಆಲೋಚನೆ ಹೇಗಿತ್ತು ಅಂದರೆ, ಅವರ ಪ್ರಕಾರ ಒಬ್ಬ ವ್ಯಕ್ತಿ ಜಾತಿ ವ್ಯವಸ್ಥೆಯ ಹರಿಕಾರನಾದರೆ ಮಾತ್ರ ಅವನು ರಾಷ್ಟ್ರೀಯ ವಾದಿ ಆಗಲು ಅರ್ಹತೆ ಪಡೆಯುತ್ತಾನೆ ಎಂದು ಅಭಿಪ್ರಾಯಪಡುತ್ತಾರೆ. ಈ ಆಲೋಚನೆ ಯಿಂದಲೆ ತಿಲಕರು ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮ ಣೇತರ ಮತ್ತು ಅಸ್ಪಶ್ಯರ ಮಕ್ಕಳು ಸೇರ್ಪಡೆ ಗೊಳ್ಳಬಾರದೆಂದು ಹೇಳುತ್ತಾರೆ. ಗೋಖಲೆ ಯಂತ ಕಾಂಗ್ರೆಸಿಗರು ಬಾಂಬೆ ಪ್ರಸಿಡೆನ್ಸಿಯಲ್ಲಿ ಎಲ್ಲರಿಗೂ ಕಡ್ಡಾಯ ಶಿಕ್ಷಣ ಎಂಬ ನಿರ್ಣಯ ವನ್ನು ಹೊರಡಿಸ ಹೊರಟಾಗ ರಾಷ್ಟ್ರೀಯವಾದಿ ಗಳು ಮುಸ್ಲಿಂ ಲೀಗ್ ಜೊತೆ ಸೇರಿ ಆ ನಿರ್ಣ ಯಕ್ಕೆ ಒಪ್ಪಿಗೆ ಸೂಚಿಸದಂತೆ ರಾಜಕೀಯ ಮಾಡುತ್ತಾರೆ. ವಲ್ಲಭಬಾಯಿ ಪಟೇಲರು ಅಂತ ರ್‌ಜಾತಿ ವಿವಾಹ ಬಿಲ್‌ನ್ನು ಮಂಡಿಸಿದಾಗ, ತಿಲಕ್‌ರು ವಿರೋಧಿಸಿ ಒಂದು ವೇಳೆ ಈ ಬಿಲ್‌ನ್ನು ಒಪ್ಪಿಕೊಂಡರೆ, ಭಾರತೀಯ ಅಸ್ಮಿತೆಗೆ ಅವಮಾನವಾಗುತ್ತದೆ ಎಂದು ಹೇಳಿಕೆ ನೀಡಿದರು.
ಹಾಗೇನೆ, ಸುಧಾರಣಾವಾದಿಗಳಾದ ಮಹಾದೇವ್ ಗೋವಿಂದ ರಾನಡೆಯಂತವರು ಉದಾರತೆ, ಸಮಾನತೆಯನ್ನು ಪ್ರತಿಬಿಂಬಿಸುವ ಸಮಾಜ ನಿರ್ಮಾಣಕ್ಕೆ ಕರೆಕೊಟ್ಟು ಜಾತಿ, ಧರ್ಮದಂತಹ ಪೂರ್ವಗ್ರಹಗಳನ್ನು ತೊಡೆದು ಹಾಕಿ ಏಕತಾ ಭಾವನೆಯನ್ನು ಪ್ರತಿಪಾದಿಸಿದರೆ, ತಿಲಕರು ತೀವ್ರವಾಗಿ ವಿರೋಧಿಸಿದರು, ಈ ಬಗೆಯ ವಿರೋಧದ ಕುರಿತು ಅಂಬೇಡ್ಕರ್ ಹೀಗೆ ಪ್ರತಿಕ್ರಿಯಿಸುತ್ತಾರೆ.It is not possible for decency to enter into the abuses that were hurled, the calumnies that were uttered, and the strategies that were employed against the social reformers. ಹಾಗೇನೆ ಸಾಮಾಜಿಕ ಮೌಲ್ಯ ಮತ್ತು ನ್ಯಾಯದ ಕುರಿತು ದ್ವನಿ ಎತ್ತಿದ ರಾನಡೆ ಯವರ ಧೈರ್ಯವನ್ನು ಅಂಬೇಡ್ಕರ್ ಪ್ರಶಂಸಿಸುತ್ತಾರೆ.
ಅಂದರೆ 1920ರ ಹೊತ್ತಿಗೆ ಗಾಂಧೀಜಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡುವ ಹೊತ್ತಿಗೆ ಕಾಂಗ್ರೆಸ್‌ನೊಳಗೆ ಜಾತಿಪರ ವಾದಿಸುವ ಒಂದು ಬಲಿಷ್ಠ ಗುಂಪು ದೊಡ್ಡ ಮಟ್ಟದಲ್ಲಿಯೇ ಸಂಘ ಟನೆಗೊಂಡಿತ್ತು. ಇದಕ್ಕೆ ಪೂರಕವಾಗಿ ಗಾಂಧೀಜಿ ಕೂಡ ಜಾತಿ ಎಂಬ ಸಂಸ್ಥೆಯ ಪರವಾಗಿದ್ದರು. 1917ರಲ್ಲಿ ಕಾಂಗ್ರೆಸ್ ಅಸ್ಪಶತೆಯನ್ನು ನಿರ್ಮೂ ಲನ ಮಾಡುವ ಒಂದು ಠರಾವನ್ನು ಹೊರಡಿ ಸಿತು. ಗಾಂಧೀ ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿ ಅಸ್ಪಶತೆಯ ನಿರ್ಮೂಲನ ಎಂಬುದು ಸ್ವರಾಜ್ಯ ಪಡೆಯುವ ಪ್ರಕ್ರಿಯೆಗೆ ಪೂರಕವಾದುದು ಎಂದು ಆ ಹೇಳಿಕೆಯಲ್ಲಿ ಪರಿಭಾವಿಸುತ್ತಾರೆ.
ಆದರೆ, ವರ್ಣಾಶ್ರಮ ಧರ್ಮವನ್ನು ರಕ್ಷಣೆ ಮಾಡಬೇಕೆಂದು ಹೇಳುತ್ತಾರೆ. ಹಾಗೇನೆ, ಶ್ರೇಷ್ಠ ವರ್ಣವನ್ನು ಯಾವನೊಬ್ಬನೂ ಸ್ವೀಕರಿಸುವುದನ್ನು ವಿರೋಧಿಸುತ್ತಾರೆ. ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿ ಯಲ್ಲಿ ಟೆಂಪಲ್ ಎಂಟ್ರಿ ಬಿಲ್‌ನ್ನು ಮಂಡಿಸಿದಾಗ ಗಾಂಧೀಜಿ ಬೆಂಬಲಿಸುತ್ತಾರೆ. ಆದರೆ, ಕೇರಳದ ಗುರುವಾಯೂರಿನ ದೇವಾಲಯಕ್ಕೆ ಅಸ್ಪಶರ ಪ್ರವೇಶವನ್ನು ನಿರಾಕರಿಸಿದರೆ ತಾನು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದು ಕೊಟ್ಟಿರುವ ಹೇಳಿಕೆಯನ್ನು ಗಾಂಧೀಜಿ ಮರೆಯುತ್ತಾರೆ. ಎಲ್ಲಿಯವರೆಗೆ ಅಂದರೆ 1933-34ರಲ್ಲಿ ರಂಗಾ ಅಯ್ಯರ್‌ರವರು ಅಸ್ಪಶತೆ ನಿರ್ಮೂಲನ ಬಿಲ್‌ನ್ನು ಸೆಂಟ್ರಲ್ ಲೆಜಿಸ್ಲೇಟಿವ್‌ನಲ್ಲಿ ಮಂಡಿಸಿದಾಗ ಗಾಂಧೀಜಿ ಕಟುವಾಗಿ ಖಂಡಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಅಂಬೇಡ್ಕರ್‌ಗೆ ಇದು ನಿರಾಶೆ ಯನ್ನುಂಟು ಮಾಡುತ್ತದೆ. ಅಂಬೇಡ್ಕರ್ ಪ್ರಕಟಿಸುವ ಈ ನಿಲುವಿಗೆ ಬಲವಾದ ಕಾರಣವೂ ಇದೆ. ಈ ಸಂಬಂಧ ಅವರು ಮೂರು ಬೇಡಿಕೆಗಳನ್ನು ಮಂಡಿಸುತ್ತಾರೆ.
ಒಂದನೆಯದಾಗಿ, ಅಂಬೇಡ್ಕರ್‌ರಿಗೆ ದೇವಾಲಯ ಪ್ರವೇಶ ವಿಚಾರ ಅಷ್ಟೊಂದು ಪ್ರಮುಖವಾದುದಾಗಿರಲಿಲ್ಲ. ಬದಲಾಗಿ, ಅಸ್ಪಶರು ಶಿಕ್ಷಣ ಸಂಸ್ಥೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಪ್ರವೇಶ ಮಾಡುವುದು ಪ್ರಮುಖವಾದು ದಾಗುತ್ತದೆ. ಒಟ್ಟಾರೆಯಾಗಿ ಅಂಬೇಡ್ಕರ್‌ರ ಬೇಡಿಕೆಗಳು ಇಂತಿವೆ-ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಮುಖ್ಯವಾಗಿ ಗ್ರಾಮಗಳಲ್ಲಿ, ಅಸ್ಪಶರಿಗೆ ನಾಗರಿಕ ಹಕ್ಕುಗಳು ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ.- ಗ್ರಾಮಗಳಲ್ಲಿರುವ ಬಾವಿ ಮತ್ತು ಕೆರೆಯ ನೀರನ್ನು ತೆಗೆಯುವ ಸ್ವಾತಂತ್ರ, ಗ್ರಾಮಗಳಲ್ಲಿರುವ ಶಾಲೆಗಳಿಗೆ ಪ್ರವೇಶ, ಸಾರ್ವಜನಿಕ ಸವಲತ್ತುಗಳು ದೊರೆಯುವಂತಾಗಬೇಕು.
ಇವೆಲ್ಲ ಈಡೇರಿದರೆ, ಹಿಂದೂ ಸಮಾಜದೊಳ ಗೊಂದು ಕ್ರಾಂತಿಯಾಗುತ್ತದೆ. ಅದರಿಂದ ಅಸ್ಪಶರಿಗೆ ಸಾರ್ವಜನಿಕವಾಗಿ ಸಾಮಾಜಿಕ ಸಮಾನತೆ ದೊರೆತಂತಾ ಗುತ್ತದೆ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಆದರೆ, ಅಂಬೇಡ್ಕರ್‌ಗೆ ಇವೆಲ್ಲವನ್ನು ದಕ್ಕಿಸಿಕೊಳ್ಳುವುದು ಸುಲಭದ ಕೆಲಸವಲ್ಲವೆಂದು ಗೊತ್ತಿತ್ತು. ಇದರಿಂದ ಹಿಂಸೆಗಳು ಉದ್ಭವ ಆಗಬಹುದು ಎಂಬ ಆತಂಕ ಅವರಲಿತ್ತು. ಏಕೆಂದರೆ, ಪೋಲೀಸ್ ಮತ್ತು ನ್ಯಾಯಾಂಗ ದಲಿತರಿಗೆ ವಿರುದ್ಧವಾಗಿರುವುದರಿಂದ, ಅಸ್ಪಶ ಗುಂಪುಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ವಿಚಾರವು ಅವರಿಗೆ ತಿಳಿದಿತ್ತು.
ಎರಡನೆಯದಾಗಿ, ಅಂಬೇಡ್ಕರ್‌ರವರು ಅಸ್ಪಶರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಭಾವಿಸುತ್ತಾರೆ. ಗ್ರಾಮಮಟ್ಟದಲ್ಲಿ ಸಮಾನ ಅವಕಾಶಗಳು ಈ ಸಮುದಾಯಕ್ಕೆ ಇಲ್ಲದಿರುವುದರಿಂದ ಇವರಲ್ಲಿ ಬಡತನ ಮತ್ತು ಮೇಲ್ಜಾತಿಗಳು ಎಸಗುವ ದೌರ್ಜನ್ಯಗಳು ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ. ಅಂಬೇಡ್ಕರ್ ರವರು ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ತಾವು ಉತ್ಪಾದನೆ ಮಾಡುವ ತರಕಾರಿ, ಹಾಲು, ಬೆಣ್ಣೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ಅವಕಾಶವೇ ಇಲ್ಲದಿರುವುದರಿಂದ, ಆರ್ಥಿಕವಾಗಿ ಅವರ ಜೀವನ ಕ್ರಮ ಅತ್ಯಂತ ಕೆಳಮಟ್ಟಕ್ಕೆ ತಲುಪಿತ್ತು ಎಂದು ಹೇಳುತ್ತಾರೆ.
ಇದರ ಜೊತೆಗೆ ದಲಿತ ಸಮುದಾಯ ಭೂಒಡೆತನ ಹಕ್ಕಿನಿಂದ ವಂಚಿತವಾಗಿತ್ತು. ಹಳ್ಳಿಯ ಸಂಪತ್ತನ್ನು ಅನುಭವಿಸುವ ಸ್ವಾತಂತ್ರ್ಯ ಇಲ್ಲದಿರುವುದು ಈ ಸಮುದಾಯವನ್ನು ಬಡತನದ ಕೂಪಕ್ಕೆ ತಳ್ಳಿಬಿಟ್ಟಿದೆ ಮತ್ತು ಅವರು ತಮ್ಮ ಬದುಕನ್ನು ಹಸನು ಗೊಳಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಭಾವಿಸುತ್ತಾರೆ.
ಮೂರನೆಯದಾಗಿ, ಅಸ್ಪಶರು ಮತ್ತು ಜಾತಿ ಹಿಂದುಗಳು ಪರಸ್ಪರ ಮಿಲನಗೊಳ್ಳುವ ಒಕ್ಕೂಟ ಸಾಮಾಜಿಕ ಸಂಬಂಧದ ಮೂಲಕ ನಡೆದರೆ, ಇಡೀ ಸಮಾಜದ ದಿಕ್ಕು ಬದಲಾವಣೆ ಯಾಗಲು ಸಾಧ್ಯವೆಂದು ಅಂಬೇಡ್ಕರ್ ಗ್ರಹಿಸುತ್ತಾರೆ. Only a common cycle of participation can help people to overcome the strangeness of feeling which one has, when brought into contact with the others. Nothing can do this more effectively in my opinion than the admission, of the Depressed Classes to the houses of the caste Hindus.
ಮೇಲಿನ ಮೂರು ಬೇಡಿಕೆಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕಾದರೆ ಯಾವುದನ್ನು ನಿರೀಕ್ಷೆ ಮಾಡದ, ಸಮಾಜದ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡ ಏಜೆನ್ಸಿ ಮತ್ತು ನಿಸ್ವಾರ್ಥ ಸೇವೆ ಮಾಡುವ ಮನಸ್ಸುಗಳು ನಿರಂತರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.
ಈ ಬಗೆಯ ಕಳಕಳಿಯನ್ನು ಅವರು ಪದೇ ಪದೇ ಹೇಳಿ ಕಾಂಗ್ರೆಸ್ ಮತ್ತು ಗಾಂಧೀಜಿ ಮೇಲೆ ಒತ್ತಡ ತಂದರೂ, ಗಾಂಧೀಜಿ ಮಾತ್ರ ಅಂಬೇಡ್ಕರ್ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ತಾನು ಪ್ರತಿಪಾದಿಸುವ ಟೆಂಪಲ್ ಎಂಟ್ರಿ ಮತ್ತು ಹರಿಜನ ಸೇವಕ ಸಂಘ ರೂಪಿಸುವ ಕಾರ್ಯ ಚಟುವಟಿಕೆ ಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಒತ್ತು ನೀಡುತ್ತಾರೆ.
ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಗಾಂಧೀಜಿ ಸಂಘಟಿಸಿದ ವಸಾಹತು ವಿರೋಧಿ ಚಳವಳಿಯಲ್ಲಿ ಜಾತ್ಯತೀತತೆ, ಅಹಿಂಸೆ ಮತ್ತು ಖಾದಿ ಕುರಿತು ಸಾರ್ವತ್ರಿಕವಾಗಿ ಜನರನ್ನು ಎಚ್ಚರಿಸಲು ಯಶಸ್ವಿಯಾದರು. ಆದರೆ, ಅದೇ ರೀತಿ, ಅಸ್ಪಶರು ಮತ್ತು ದುರ್ಬಲ ವರ್ಗದವರ ಮೇಲೆ ಜಾತಿ ಹಿಂದುಗಳು ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯ ತಡಗಟ್ಟುವಲ್ಲಿ ಯಾವುದೇ ಶ್ರಮ ವಹಿಸಲಿಲ್ಲ. ಇದೇ ಅಲ್ಲವೆ ವಿಪರ್ಯಾಸ?
ಅಸ್ಪೃಶರನ್ನು ಉದ್ದೇಶಿಸಿ ರೂಪಿಸಿದ ಗಾಂಧೀ ಹೋರಾಟಕ್ಕೆ ಇದು ದೊಡ್ಡ ಹಿನ್ನಡೆಯಂತೆಲೇ ಹೇಳಬಹುದು. ಈ ಹಿನ್ನಡೆಯ ಪರಿಣಾಮಗಳು ಸ್ವತಂತ್ರ ಭಾರತದಲ್ಲೂ ಪ್ರತಿದ್ವನಿಸುತ್ತಲೇ ಇದ್ದಿರುವುದು ದಲಿತ, ದುರ್ಬಲ ವರ್ಗಗಳ ದುರದೃಷ್ಟ. ಈ ಕಾರಣಕ್ಕಾಗಿ ಆಧುನಿಕ ಭಾರತದ ಸರಕಾರವು ಒಂದು ಏಜನ್ಸಿಯಾಗಿ ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು.
ಸಂವಿಧಾನವು ಕೂಡ ಸ್ಟೇಟ್‌ಗೆ ವಿಶೇಷವಾದ ಜವಾಬ್ದಾರಿಯ ಅವಕಾಶವನ್ನು ಕಲ್ಪಿಸಿ, ದಲಿತರ ಅಭಿವೃದ್ಧಿ, ರಕ್ಷಣೆ ಮತ್ತು ಅವರ ಬದುಕಲ್ಲಿ ಪರಿವರ್ತನೆ ತರುವ ವಿಶೇಷ ಯೋಜನೆ ರೂಪಿಸುವ ಮಹತ್ಕಾರ್ಯವನ್ನು ಸೂಚಿಸಿತು. ಅಸ್ಪಶತೆಯ ನಿರ್ಮೂಲನ, ಜೀತಪದ್ಧತಿಯಂತಹ ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕಿ ದಲಿತರ ರಕ್ಷಣೆ ಮಾಡುವುದು ಒಂದನೆಯ ಜವಾಬ್ದಾರಿ. ಶೈಕ್ಷಣಿಕ ಯೋಜನೆಗಳಲ್ಲಿ ಮುಖ್ಯವಾಗಿ ಸ್ಕಾಲರ್‌ಶಿಪ್, ವಸತಿ ನಿಲಯಗಳ ಸವಲತ್ತುಗಳು, ದಲಿತ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಎರಡನೆಯ ಜವಾಬ್ದಾರಿ. ಮತ್ತು ಶಾಸಕಾಂಗ, ಶೈಕ್ಷಣಿಕ ಮತ್ತು ಉದ್ಯೋಗ ರಂಗದಲ್ಲಿ ಮೀಸಲಾತಿ ಮೂರನೆಯ ಜವಾಬ್ದಾರಿ.
ಈ ಬಗೆಯ ಸಂವಿಧಾನಾತ್ಮಕ ಸುಧಾರಣೆಗಳು ದಲಿತರ ಏಳಿಗೆಗೆ ಅತೀ ಜರೂರಾಗಿ ಅನುಷ್ಠಾನ ಮಾಡಬೇಕಾದುದು ಸರಕಾರದ ಕರ್ತವ್ಯ ವಾಗಿದ್ದು, ಇದನ್ನು ಈಡೇರಿಸಲು ಎದುರಾಗುವ ಎಡರುತೊಡರುಗಳು ಈ ಸಮುದಾಯದ ಮತ್ತು ಒಟ್ಟಾರೆ ನಾಗರಿಕ ಸಮಾಜದ ಬೆಳವಣಿಗೆಗೆ ಶೋಭೆ ತರುವಂತಹದ್ದಾಗದು. ಆದರೆ, ಕಳೆದ ಆರು ದಶಕಗಳಲ್ಲಿ ಈ ಸಮುದಾಯದ ಬೆಳವಣಿಗೆಗೆ ಮತ್ತು ಅವರ ಆಸ್ತಿ ರಕ್ಷಣೆ ವಿಚಾರವಾಗಿ ಸರಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಮತ್ತು ಅದರ ಫಲಿತಾಂಶಗಳು ನಿರಾಶೆಯನ್ನುಂಟು ಮಾಡುತ್ತದೆ. ಈ ಜನತೆಯ ಜೀವನ ಕ್ರಮದಲ್ಲಿ ಆದ ಬದಲಾವಣೆಯನ್ನು ಗಮನಿಸಿದರೆ ಭಾರತದ ನಾಗರಿಕ ಸಮಾಜ ಶ್ರೇಷ್ಠವಾದುದೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
Source: Varthabharathi Kannada daily 

No comments:

Post a Comment

html